Saturday, 19 December 2015

ಎದೆಗೆ ಬಿದ್ದ ಅಕ್ಷರ


ಹತ್ತನೆಯ ತರಗತಿ ಎದೆಗೆ ಬಿದ್ದ ಅಕ್ಷರ ಮೂಲ ಪಾಠ














ನನ್ನ ದೇವರು
 
             ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು 'ನನ್ನ ದೇವರು' ಹೆಸರಡಿ ಲೇಖಕರ, ಚಿಂತಕರ ಅನಿಸಿಕೆಗಳನ್ನು ಪ್ರಕಟಿಸುತ್ತಿತ್ತು.ಅಕಸ್ಮಾತ್ ನನ್ನನ್ನೂ ಕೇಳಿದರೆ ಯಾವುದಕ್ಕೂ ಇರಲಿ ಎಂದು ನಾನು ಬರೆಯಬೇಕಾದುದನ್ನು ಅಂದಾಜಿಸಿಕೊಂಡಿದ್ದೆ. ಆದರೆ ಪತ್ರಿಕೆಯವರು ನನಗೆ ದೇವರಿಲ್ಲ ಎಂದು ನಿರ್ಧರಿಸಿಕೊಂಡೋ ಏನೋ ನನ್ನನ್ನು ಕೇಳಲೇ ಇಲ್ಲ. ನಾನು ಅಂದಾಜಿಸಿಕೊಂಡಿದ್ದ ನನ್ನ ದೇವರು ನನ್ನೊಳಗೇ ಉಳಿಯಿತು.
         ನನ್ನ ದೇವರು ನನ್ನೊಳಗೆ ಉಳಿದಿರುವುದು ಹೀಗೆ :
ಕವಿ ಸಿದ್ಧಲಿಂಗಯ್ಯ ಒಮ್ಮೆ ನನಗೆ ಹೇಳಿದ ಕತೆಯಲ್ಲಿ ಮನೆಮಂಚಮ್ಮ ಎಂಬ ಗ್ರಾಮದೇವತೆಯ ಒಳಗಿನಿಂದ ನನ್ನ ದೇವರು ಒಡಮೂಡುತ್ತದೆ. - ಒಂದ್ಸಲ ಒಂದು ಗ್ರಾಮದ ಜನರೆಲ್ಲಾ ಸೇರಿ ತಮ್ಮ ದೇವತೆಗೆ ಗುಡಿಕಟ್ಟಲು ಆರಂಭಿಸುತ್ತಾರೆ. ಹೀಗೆ ಕಟ್ತಾ ಚಾವಣಿ ಮಟ್ಟಕ್ಕೆ ಆ ಗುಡಿ ಬಂದಾಗ ಒಬ್ಬನ ಮೈಮೇಲೆ ಆ ದೇವತೆ ಮಂಚಮ್ಮ ಆವಾಹಿಸಿಕೊಂಡು ' ನಿಲ್ಸಿ ನನ್ ಮಕ್ಕಳಾ' ಎಂದು ಅಬ್ಬರ ಮಾಡುತ್ತಾಳೆ. ಆ ಅಬ್ಬರಕ್ಕೆ ಜನ ತಮ್ಮ ಕೆಲ್ಸ ನಿಲ್ಸಿ ಕಕ್ಕಾಬಿಕ್ಕಿಯಾಗಿ ನೋಡುತ್ತಿರಲು ಆ ದೇವತೆ ಹಾಗೂ ಆ ಜನರ ನಡುವೆ ಮಾತುಕತೆ ನಡೆಯುತ್ತದೆ.
          ‘ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ ?’
         ‘ನಿನಗೊಂದು ಗುಡಿಮನೆ ಕಟ್ತಾ ಇದೀವಿ ತಾಯಿ'
        ‘ಓಹೋ, ನನಗೇ ಗುಡಿ ಮನೆ ಕಟ್ತಾ ಇದ್ದಿರೋ ? ಹಾಗಾದರೆ ನಿಮಗೆಲ್ಲಾ ಮನೆ ಉಂಟಾ ನನ್ ಮಕ್ಕಳಾ ?’
         ‘ನನಗಿಲ್ಲ ತಾಯಿ ' - ಅಲ್ಲೊಬ್ಬ ಹೇಳ್ತಾನೆ.
         ‘ ಹಾಗಾದರೆ ಎಲ್ಲರಿಗೂ ಮನೆ ಆಗುವವರೆಗೆ ನನಗೂ ಮನೆ ಬೇಡ'
       -ಹೀಗೆಂದ ಮಂಚಮ್ಮದೇವಿ ಮನೆಮಂಚಮ್ಮಳಾಗುತ್ತಾಳೆ !
ಛಾವಣಿ ಇಲ್ಲದ ಗುಡಿಯಲ್ಲಿ ತಾಯಿ ಮನೆಮಂಚಮ್ಮ ಇಂದು ಪೂಜಿತಳಾಗುತ್ತಿದ್ದಾಳೆ. ಈ ರೀತಿಯಲ್ಲಿ ಛಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು ಇಟ್ಟರೆ ಅದೇ ನನ್ನ ದೇವರಾಗುತ್ತದೆ.

ದಯೆಗಾಗಿ ನೆಲ ಒಣಗಿದೆ
       ಬುದ್ಧನಂತೂ ಯಾವ ಸಹಸ್ರಮಾನವನ್ನು ಮೀರಿದವನು .
ಈಗಷ್ಟೆ ಕಳೆದುಹೋದ ಸಹಸ್ರಮಾನದ ಕ್ರಿಸ್ತನ ದೇಹದ ದಯೆಯ ರಕ್ತ ಈ ಭೂಮಿಗೆ ಬಿದ್ದು ಎರಡು ಸಾವಿರ ವರ್ಷಗಳು ಆದವಂತೆ . ರಕ್ತ ಭೂಮಿಗೆ ಬೀಳದಿರುವುದು ಅಂದಿಗಿಂತಲೂ ಇಂದಿಗೇ ಹೆಚ್ಚು ಬೇಕಾಗಿದೆ. ಕ್ರಿಸ್ತ ಮತ್ತು ದಯೆಗಾಗಿ ಭೂಮಿ ಒಣಗಿದೆ.
        ಇದಾದ ಮೇಲೆ ನನಗೆ ಈ ಸಹಸ್ರಮಾನದಲ್ಲಿ ಕಾಣುವುದು ಹನ್ನೆರಡನೆಯ ಶತಮಾನದ ವಚನ ಆಂದೋಲನದ ಆ ಇಪ್ಪತ್ತೈದು ವರ್ಷಗಳು. ಹುಡುಕಿದರೂ ಜಗತ್ತನಲ್ಲೇ ಕರ್ನಾಟಕದ ಈ ಮಾದರಿ ಬಹುಶಃ ಎಲ್ಲೂ ಸಿಗುವುದಿಲ್ಲವೇನೋ ! ಈ ವಚನಧರ್ಮವನ್ನು ಜಾತಿಯ ಬಚ್ಚಲಿನಿಂದ ಮೇಲೆತ್ತಿ ರಕ್ಷಿಸಿದರೆ ಜಗತ್ತಿಗೇ ಇದು ಬೆಳಕಾಗಬಹುದೇನೋ. ಇದು ಜಾತಿಯಾದರೆ ಕೆಟ್ಟ ಜಾತಿ ; ಧರ್ಮವಾದರೆ ಮಹೋನ್ನತ ಧರ್ಮ.
          ಆಮೇಲೆ ಪರಮಹಂಸ. ಒಂದು ದೇಹ ಮನಸ್ಸು ಅದೆಷ್ಟು ಮಾಧ್ಯಮವಾಗಬಹುದೋ ಅದಷ್ಟೂ ಒಂದೇ ದೇಹದಲ್ಲಿ ಸಂಭವಿಸಿದ ಒಂದು ಉದಾಹರಣೆ ಪರಮಹಂಸ.ಯಾವುದನ್ನು ಕೊಲ್ಲದೆ, ಒಳಿತುಗಳನ್ನೇ ಕೂಡಿಸುತ್ತ ಕೂಡಿಸುತ್ತ ಹೋದ ಪರಮಹಂಸ ಹಾಗೂ ನಾನು ಹುಟ್ಟುವ ಮೊದಲು ಕಾಲವಶವಾದ ಗಾಂಧಿ - ಒಂದು ಜೀವಿತದಲ್ಲಿ ಇರಬಹುದಾದ ಗಳಿಗೆ ಗಳಿಗೆಗಳನ್ನು ಬದುಕುತ್ತಾ ಗಳಿಗೆಯಿಂದ ಗಳಿಗೆಗೆ ಎಡವುತ್ತ ಸತ್ಯ ಸಮಾನತೆಗಳ ಕಡೆಗೆ ನಡೆಯತ್ತ ಸಮಷ್ಟಿಯೇ ಆದ ಗಾಂಧಿ ಜೊತೆಗೆ ಅಂಬೇಡ್ಕರ್ ರ ಆರ್ತತೆ ಹಾಗೂ ಋಷಿ ಐನ್ ಸ್ಟೈನ್.
           ಇಷ್ಟಾದ ಮೇಲೆ ವ್ಯಾಸ ಕ್ರಿಸ್ತ ಪೂರ್ವವೋ ಕ್ರಿಸ್ತಶಕವೋ ನನಗೆ ತಿಳಿಯದು .ಅವನು ಎಲ್ಲಾ ಶತಮಾನಗಳ ಜತೆ ಬೆಳೆಯತ್ತಲೇ ಇರುವವನು. ಟಾಲ್ ಸ್ಟಾಯ್, ಶೇಕ್ಸ್ ಪಿಯರ್ ಹಾಗೂ ನಮ್ಮ ನೆಲದ ಪಂಪ, ಕುಮಾರವ್ಯಾಸ,ಕವಿ ಬೇಂದ್ರೆಯವರ ಒಂದಿಷ್ಟು ಕವಿತೆ,ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಪುಣ್ಯದಂತೆ ನನಗೆ ಕಾಣಿಸುತ್ತವೆ.
ಮೂರ್ಛಾವಸ್ಥೆಯಲ್ಲಿ ಕಾರುಣ್ಯ
 
          ಬುದ್ಧನ ಕಾರುಣ್ಯ ನನ್ನ ಮನದೊಳಗೆ ಕೂತ ಬಗೆಯನ್ನು ಒಂದು ಉದಾಹರಣೆಯಿಂದ ಹೇಳಲು ಪ್ರಯತ್ನಿಸುವೆ.
ಇತ್ತೀಚೆಗೆ ಶಿವಮೊಗ್ಗದ ಡಾ. ಅಶೋಕ ಪೈ ಅವರು ಮೈಸೂರಿಗೆ ಬಂದಿದ್ದರು. ಅವರು ಮನಸ್ಸಿನ ಬಗ್ಗೆ ನಡೆದಿರುವ ಒಂದು ಸಂಶೋಧನಾ ಸತ್ಯವನ್ನು ಹೇಳಿದರು. ಏನೆಂದರೆ - ಕೆಲವು ಜನ ಒಂದು ಕೊಠಡಿಯಲ್ಲಿ ಕುಳಿತು
ಟೆಲಿವಿಷನ್ ನೋಡುತ್ತಿದ್ದಾರೆ ಎಂದಿಟ್ಟುಕೊಳ್ಳೋಣ.ಇನ್ನೊಂದಿಷ್ಟು ಜನ ಇದರ ಅರಿವಿಲ್ಲದೆ ಇನ್ನೊಂದು ಪಕ್ಕದ ಕೊಠಡಿಯಲ್ಲಿ ಇಸ್ಪೀಟ್ ಆಡುತ್ತಲೋ, ಏನೋ ಮಾತುಕತೆಯಾಡುತ್ತಲೊ ಅಲ್ಲಿ ತಮ್ಮಷ್ಟಕ್ಕೆ ತಾವಿರುವರು ಎಂದಿಟ್ಟುಕೊಳ್ಳೋಣ. ಆಗ ಟೆಲಿವಿಜನ್ ನಲ್ಲಿ ಯಾವುದಾದರೂ ಕೊಲೆ ದೃಶ್ಯ ಬಂದಾಗ ಇಲ್ಲಿ ಇದನ್ನು ನೋಡುತ್ತಿದ್ದವರ ದುಃಖದ ಭಾವನೆಯು ಇದನ್ನು ನೋಡದೆ ಇರುವ ಪಕ್ಕದ ಕೊಠಡಿಯಲ್ಲಿ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುತ್ತಿರುವವರ ಮನಸ್ಸಿಗೂ ಮುಟ್ಟಿ ಅವರ ಮನಸ್ಸು ಸ್ವಲ್ಪಮಟ್ಟಿಗೆ ದುಗುಡಗೊಳ್ಳುತ್ತದಂತೆ. ಅದೇ ಟೆಲಿವಿಜನ್ ನಲ್ಲಿ ಯಾವುದಾದರೂ ನೃತ್ಯ ದೃಶ್ಯ ಬಂದಾಗ ಅದನ್ನು ನೋಡುತ್ತಿದ್ದವರ ಖುಷಿ ಭಾವನೆಯು ಪಕ್ಕದ ಕೊಠಡಿಯಲ್ಲಿ ಇದನ್ನು ನೋಡದ ತಮ್ಮಷ್ಟಕ್ಕೆ ತಾವೇ ಇಸ್ಪೀಟು ಆಡುವವರ ಮನಸ್ಸಿನ ಮೇಲೂ ಪರಿಣಾಮ ಮಾಡಿ ಸ್ಪಲ್ಪ ಮಟ್ಟಿಗೆ ಸಂತೋಷದ ಭಾವನೆ ಉಂಟಾಗುವುದಂತೆ.
      ಈ ನಿಜ ಏನನ್ನು ಹೇಳುತ್ತದೆ? ಯಾವ ಜೀವಿಯು ತನ್ನಷ್ಟಕ್ಕೆ ತಾನಿಲ್ಲ ಎಂದು ಹೇಳುತ್ತದೆ. ಯಾವುದೇ ಒಂದು ಜೀವಿಗೆ ಆಗುವ ದುಃಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತಾ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೋ. ಈ ಅನುಕಂಪನ ನಿಜವು ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ. ಬುದ್ಧನ ಕಾರುಣ್ಯ ಇಲ್ಲಿಂದಲೇ ಮೂಡಿರಬಹುದು.
         ಕೊಲೆ ಸುಲಿಗೆ ದ್ವೇಷ ಅಸೂಯೆಗಳಿಂದ ಕ್ಷೋಭೆಗೊಂಡು ನರಳುತ್ತಿರುವ ಜಗತ್ತು -ಅದು ಘಾಸಿಗೊಳಿಸುವುದು -ತನ್ನ ಆಳದ ಒಳ ಸಮಷ್ಟಿ ಮನಸ್ಸನ್ನೇ. ಈ ಸಮಷ್ಟಿ ಮನಸ್ಸಲ್ಲಿ ಎಲ್ಲರೂ ಇರುತ್ತಾರೆ.ನಾವು ಮನುಷ್ಯರು ಗುಣವಾಗಬೇಕಿದೆ. ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ.
   ಈ ಎಳೆ ಹಿಡಿದು ಜಾಗತೀಕರಣವನ್ನೂ ರೂಪಿಸ ಬೇಕಾಗಿದೆ. ಆಗ ಮಾತ್ರವೇ ಅದು ಜಾಗತೀಕರಣ..

No comments:

Post a Comment