Saturday, 2 January 2016

ಹತ್ತನೆಯ ತರಗತಿ ಒಗಟುಗಳು


ಜನಪದ ಒಗಟುಗಳು
. “ ಕೈಯುಂಟು ಕಾಲಿಲ್ಲ ಶಿರಹರಿದ ಮುಂಡ
ಮೈಯೊಳಗೆ ನವಗಾಯ ಒಂಬತ್ತು ತುಂಡ
ಒಯನೊಯ್ಯನೇ ಬಂದು ಹೆಗಲೇರಿಕೊಂಡ
ರಾಯರಾಯರಿಗೆಲ್ಲ ತಾನೇ ಪ್ರಚಂಡ ಉತ್ತರ: ಅಂಗಿ
ಮೊದಲನೆಯ ಒಗಟಿನ ಉತ್ತರ ಅಂಗಿ. ಅಂಗಿಯ ತೋಳುಗಳ ಭಾಗವನ್ನು ಕೈ ಎಂದಿದ್ದಾರೆ.ಅಂಗಿಯನ್ನು ಕಾಲಿನ ಭಾಗಕ್ಕೆ ಹಾಗೂ ತಲೆಯ ಭಾಗಕ್ಕೆ ತೊಡುವುದಿಲ್ಲವಾದ್ದರಿಂದ "ಕಾಲಿಲ್ಲ" ಶಿರಹರಿದ" ಪದವನ್ನು ಬಳಸಿದ್ದಾರೆ.ಬಟ್ಟೆಯ ಬೇರೆ ಬೇರೆ ಭಾಗ ಸೇರಿಸಿ ಹೊಲಿಗೆ ಹಾಕುವದನ್ನೇ 'ನವ ಗಾಯ ' ಎಂದಿದ್ದಾರೆ, .ಹಾಗೆಯೇ ರಾಜಮಹಾರಾಜರಿಗೆಲ್ಲರಿಗೂ ಉಡುಗೆಯಾಗಿರುವ ಅಂಗಿ ಪ್ರಚಂಡವಾಗಿದೆ.

. “ಅಂಗೈ ಕೊಟ್ಟರೆ ಮುಂಗೈಯ ನುಂಗುವುದು
ಸಿಂಗಳುಕನಲ್ಲ ಶಿವಬಲ್ಲ ಬೆಡಗೀನ
ಜಾಣೆ ಕನ್ನಡವ ತಿಳಿದ್ಹೇಳೆ" ಉತ್ತರ: ಕುಪ್ಪಸ
ಕುಪ್ಪಸವು ಅಂಗೈಯನ್ನು ತೂರಿಸಿಕೊಂಡು ಮುಂಗೈ ಮೂಲಕ ಶರೀರದಲ್ಲಿ ಕೂರುತ್ತದೆ. ಆದ್ದರಿಂದ ಇದು ಸಿಂಗಳೀಕನಾಗದೆ ಕುಪ್ಪಸವಾಗಿದೆ.

. “ನೀರಲ್ಲೆ ಹುಟ್ಟೋದು ನೀರಲ್ಲೆ ಬೆಳಿಯೋದು
ನೀರು ತಾಕಿದರೆ ಮಟಮಾಯ ಕನ್ನಡದ
ಬೆಡಗೀನ ಜಾಣೆ ತಿಳಿದ್ಹೇಳೆ" ಉತ್ತರ: ಉಪ್ಪು
ಉಪ್ಪನ್ನು ನೀರಿನಿಂದಲೇ ತಯಾರಿಸುತ್ತಾರೆ.ನೀರಿನಲ್ಲಿ ಹುಟ್ಟಿದ ಉಪ್ಪು,ನೀರಲ್ಲಿ ಕರಗಿ ಹೋಗುತ್ತದೆ.ಆದ್ದರಿಂದ ಈ ಒಗಟಿನ ಉತ್ತರ ಉಪ್ಪು.

. “ಹಿತ್ಲಲ್ಲಿ ಹುಟ್ಟೋದು ಹೊತ್ತು ನೀರ ಹುಯ್ಯೋದು
ಅದು ಒಂದು ಗಿಡದ ಪರಿಕಾರ – ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ " ಉತ್ತರ : ಹಿತ್ಲವರೆ
ಅವರೆಯನ್ನು ಹಿತ್ತಲಿನಲ್ಲಿ ಬೆಳೆಸುತ್ತಾರೆ.ಹೊತ್ತು ಹೊತ್ತಿಗೆ ಇದಕ್ಕೆ ನೀರು ಹಾಕಿ ಬೆಳೆಸುತ್ತಿದ್ದರು.ಆದ್ದರಿಂದ ಈ ಒಗಟಿನ ಉತ್ತರ ಹಿತ್ಲವರೆ.(ಇಲ್ಲಿ ಹೊತ್ತು ನೇರ ಹುಯ್ಯೋದು ಎಂಬುದನ್ನು ನೀರನ್ನು ಹೊತ್ಕೊಂಡು ಹಾಕುತ್ತಾರೆ ಎಂದೂ ಅರ್ಥೈಸಬಹುದು)ಪರಿಕಾರ= ಪ್ರಕಾರ

. “ ಕೆಸರಲ್ಲಿ ಹುಟ್ಟೋದು ಕೆಸರಲ್ಲಿ ಬೆಳೆಯೋದು
ಅದು ಒಂದು ಗಿಡದ ಪರಿಕಾರ - ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ತಾವರೆ ಬೇರು
ತಾವರೆಯು ಕೆಸರಿನಲ್ಲಿ ಹುಟ್ಟಿ ,ಕೆಸರಿನಲ್ಲಿ ಬೆಳೆಯುತ್ತದೆ. ಆದ್ದರಿಂದ ಈ ಒಗಟಿನ ಉತ್ತರ ತಾವರೆ ಬೇರು.

. “ಬದಿಯಲ್ಲಿ ಹುಟ್ಟೋದು ಬದಿಯಲ್ಲಿ ಬೆಳೆಯೋದು
ಹೋಗೋರ ಮುಂಜೆರಗ ಹಿಡಿಯೋದು -ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಉತ್ತರಾಣಿ ಗಿಡ
ಉತ್ತರಾಣಿ ಗಿಡವು ದಾರಿಯ ಬದಿಯಲ್ಲಿ ಹುಟ್ಟುತ್ತದೆ.ಹಾದಿ ಬದಿಯಲ್ಲಿ ಹುಟ್ಟುವ ಇದು ನಡೆದಾಡುವ ಹೆಂಗಸರ ಸೆರಗನ್ನು ಹಿಡಿಯುತ್ತದೆ.ಆದ್ದರಿಂದ ಈ ಒಗಟಿಗೆ ಉತ್ತರ ಉತ್ತರಾಣಿ ಗಿಡ.

. “ಹೊಲದಲ್ಲಿ ಹುಟ್ಟೋದು ಹೊಲದಲ್ಲಿ ಬೆಳೆಯೋದು
ಉಳುವಾನ ಕಂಡು ನಗುವುದು - ಎಲೆಬಾಲೆ
ಬಾಲೆ ನಮ್ಮರ್ಥ ಒಡೆದ್ಹೇಳೆ" ಉತ್ತರ : ಗರಿಕೆ ಹುಲ್ಲು
ಹೊಲದ ಬದುಗಳಲ್ಲಿ ಹುಟ್ಟಿ ಬೆಳೆಯುವ ಗರಿಕೆ ಹುಲ್ಲು ರೈತರಿಗೆ ಹಲವು ಬಗೆಗಳಲ್ಲಿ ಉಪಯುಕ್ತವಾದುದು. ಅದ್ದರಿಂದ ಈ ಒಗಟಿನ ಉತ್ತರ ಗರಿಕೆ ಹುಲ್ಲು.

. “ಕಲ್ಲಲ್ ಕುಕ್ಕೂದಲ್ಲ ನೀರಲ್ ಸೆಳೆವುದಲ್ಲ
ಎಲ್ಲೆಲ್ಲೂ ಕಂಡ್ರೂ ಮಡಿವಸ್ತ್ರ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಕೊಕ್ನ್ಹಕ್ಕಿ (ಕೊಕ್ಕನ್ ಹಕ್ಕಿ)
ಈ ಒಗಟಿನಲ್ಲಿ ಬಟ್ಟೆ ಒಗೆಯುವ ಪ್ರಕ್ರಿಯೆಯನ್ನು ಹೇಳುತ್ತಿದ್ದಾರೆ .ಬಟ್ಟೆಯನ್ನು ಶುಭ್ರಗೊಳಿಸಲು ನಾವು ಕಲ್ಲಿನಲ್ಲಿ ಕುಕ್ಕುತ್ತೇವೆ. ಅನಂತರ ನೀರಿನಲ್ಲಿ ಸೆಳೆಯುತ್ತೇವೆ. ಆದರೆ ಕೊಕ್ಕರೆ ಕಲ್ಲಲ್ಲಿ ಕುಕ್ಕದೆ,ನೀರಿನಲ್ಲಿ ಸೆಳೆಯದೆ ಮಡಿವಸ್ತ್ರದಂತೆ ಶುಭ್ರವಾಗಿ ಕಾಣುತ್ತದೆ.ಕೊಕ್ಕರೆಯು ಹಿಂಡು ಹಿಂಡಾಗಿಯೇ ಇರುವುದರಿಂದ 'ಎಲ್ಲೆಲ್ಲೂ ಕಂಡ್ರೂ' ಪದವನ್ನು ಬಳಸಿದ್ದಾರೆ.
ಕರಾವಳಿಯ ಕುಂದಾಪುರ ಭಾಗಗಳಲ್ಲಿ ಕೊಕ್ಕರೆಗೆ ಕೊಕ್ಹ್ನಕ್ಕಿ (ಕೊಕ್ಕನ್ ಹಕ್ಕಿ)ಎಂದೇ ಕರೆಯುತ್ತಾರೆ.

. “ತಂದೀ ಮದಿಗ್ಹೋಪ್ದಲ್ಲ ತಾಯ್ಮನಿಗೆ ಹೋಪ್ದಲ್ಲ
ಮುಂದದು ಧಾರಿ ಮೂರುತಕ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಸಂಪಿಗೆ ಹೂವು
ಸಂಪಿಗೆ ಎಂದರೆ ಇಲ್ಲಿ "ನಾಗ ಸಂಪಿಗೆ "ಎಂದು ಅರ್ಥೈಸಿಕೊಳ್ಳಬೇಕು. ಈ ನಾಗ ಸಂಪಿಗೆಯನ್ನು ಶುಭಕಾರ್ಯಗಳಿಗೆ ಬಳಸುವುದಿಲ್ಲ. ಏಕೆಂದರೆ ಈ ಹೂವಿನ ಮಧ್ಯದಲ್ಲಿ ಹಾವಿನ ಹೆಡೆಯ ಆಕಾರದ ಎಸಳು ಇರುತ್ತದೆ. ಆದ್ದರಿಂದ ಇದನ್ನು ತಂದೆ, ಮದುವೆಗೆ ಒಯ್ಯುವದಿಲ್ಲ &ತಾಯಿ ಮನೆಗೆ ಒಯ್ಯುವದಿಲ್ಲ ಅಥವಾ ತಾಯಿ ಮನೆಗೆ ಆ ಹೂವನ್ನು ತೆಗೆದುಕೊಂಡು ಬರಲು ಒಪ್ಪುವುದಿಲ್ಲ .ಮುಂದದು ಧಾರಿ ಮೂರುತಕ ಅಂದರೆ ಮೋಕ್ಷವನ್ನು ಪಡೆಯುವ ಶುಭ ಮಾರ್ಗಎಂದು ಅರ್ಥ. ಈ ಹೂವನ್ನು ಮೋಕ್ಷ ಮಾರ್ಗದಾತನಾದ ಶಿವನ ಪೂಜೆಗೆ ಮಾತ್ರ ಬಳಸುವರು .(ಕೃಪೆ: ಕನ್ನಡ ಎಸ್.ಟಿ.ಎಫ್)

೧೦. “ದರಿಯ ಮ್ಯಾಲ್ ಹುಟ್ಟುವುದು ದೊರಿಯಾಗಿ ಬೆಳೆವುದು
ಅರಮನೆಗುತ್ತರವ ಕೊಡುವುದು - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ಹನಿಮರ (ತಾಳೆ ಮರ)
ತಾಳೆ ಮರವು ಸಾಮಾನ್ಯವಾಗಿ ಬೇಲಿ ಮೇಲೆ ಹುಟ್ಟುತ್ತದೆ .ನೇರವಾಗಿ(ತಲೆಎತ್ತಿ)ಎತ್ತರವಾಗಿ ಬೆಳೆಯುವುದರಿಂದ ದೊರೆಯಂತೆ ಬೆಳೆಯುವುದು ಎಂದಿದ್ದಾರೆ.ತಾಳೆ ಮರದ ಗರಿಯನ್ನು ಅರಮನೆಗಳಲ್ಲಿ ಪತ್ರವ್ಯವಹಾರಕ್ಕೆ ಬಳಸುತ್ತಾರೆ(ತಾಳೆಗರಿ).ಈ ಒಗಟಿನಲ್ಲಿ ದರಿ ಎಂದರೆ ಮಣ್ಣಿನಿಂದ ನಿರ್ಮಿಸಿದ ಬೇಲಿ(ಕಾಪೌಂಡ್ ರೀತಿಯ ರಚನೆ) ಎಂದು ಅರ್ಥ.ಕುಂದಾಪುರ ಕನ್ನಡದಲ್ಲಿ ಬೇಲಿಗೆ ದರೆ ಎಂದು ಕರೆಯುವುದು ರೂಢಿ. (ಉಚ್ಛಾರಣೆ-ಧರೆ>ದರೆ>ದರಿ)

೧೧. ಹಸಿಹಸಿಯ ಬೀಳೆ ಮಸಿಯ ಬಣ್ಣದ ಬೀಳೆ
ಬಿಸಿನೀರ ಹಾಕಿ ಸಲಗುವಿ - ಅಂಬಲ್ ಹಾಡು
ಜಾಣಿ ಕನ್ನಡವ ತಿಳಿದ್ಹೇಳು" ಉತ್ತರ : ತಲೆಕೂದಲು
ತಲೆಕೂದಲು ಹಸಿಹಸಿಯಾಗಿರುವ(ಜೀವಂತವಾಗಿರುವ, ಕೂದಲು ಬೆಳೆಯುತ್ತಿರುವುದರಿಂದ) ಕಪ್ಪು(ಮಸಿ)ಬಣ್ಣದ ಬಳ್ಳಿಯಂತಿರುತ್ತದೆ.ತಲೆಕೂದಲನ್ನು ಬಿಸಿನೀರು ಹಾಕಿ ಸಲಹುತ್ತೇವೆ.(ಪೋಷಿಸುತ್ತೇವೆ) ಆದ್ದರಿಂದ ಈ ಒಗಟಿನ ಉತ್ತರ ತಲೆಕೂದಲು (ಬೀಳು=ಬಳ್ಳಿ ,ಲತೆ )

೧೨. “ಬಗಲಲ್ಲಿ ಕುಕ್ಕುವುದು ಬಾಯಲ್ಲಿ ತಿಂಬೂದು
ನಂಗ್ಹೇಳಿ ಅರ್ತು ಈ ಹಾಡಿನ - ಹೇಳ್ದಿರೆ
ಕೈಗೆ ಹಲ್ ಮುರ್ದು ಕೊಡುವೆನು ಉತ್ತರ : ಬೀಸುಕಲ್ಲು
ಬೀಸುಕಲ್ಲಿನಲ್ಲಿ ಕಾಳುಗಳನ್ನು ನೆತ್ತಿಯ ಮೇಲೆ ಹಾಕಿ ಬೀಸಿದಾಗ ಅದು ಮಗ್ಗುಲಲ್ಲಿ ಬೀಳುತ್ತದೆ ಆದ್ದರಿಂದ ಈ ಒಗಟಿನ ಉತ್ತರ ಬೀಸುಕಲ್ಲು.

No comments:

Post a Comment